ಶುಕ್ರವಾರ, ಅಕ್ಟೋಬರ್ 16, 2009

ಕರಗಿದ ಮಂಜು

ಈ ಕತೆ ನಾನು ಬರೆದಿದ್ದು ೨೦೦೨-೦೩ ರ ಸುಮಾರು... .ಕರ್ಮವೀರದಲ್ಲಿ ಪ್ರಕಟವಾಗಿತ್ತು.ಪ್ರಸ್ತುತ ಕತೆಯ ಹಸ್ತಪ್ರತಿ
ಸಹ ನನ್ನಲ್ಲಿ ಉಳಿದಿಲ್ಲ.ಇನ್ನು ಕರ್ಮವೀರದ ಕಾಂಪ್ಲಿಮೆಂಟರಿ ಕಾಪಿಯಾರೋ ತಗೊಂಡು ಹೋಗಿದ್ದು ವಾಪಸ್ ಕೊಡಲಿಲ್ಲ.
ಈಗ ಈ ಕತೆ ನೆನಪಿನಾಳದಿಂದ ಹೆಕ್ಕಿ ಮತ್ತೆ ಬರೆದಿರುವೆ. ಕತೆಯ ಮೊದಲಭಾಗ ಇದೆ...ಮುಂದಿನ ಭಾಗಕ್ಕಾಗಿ ಕಾಯುವಿರಿ ತಾನೇ....


-------------------
== ೧ ==


ಸ್ಕೂಲ್ ವ್ಯಾನ್ ಬರುವುದನ್ನೇ ಕಾಯುತ್ತ ಗೇಟಿನಲ್ಲಿ ನಿಂತ ಸುರೇಖಳಿಗೆ ಅದು ಬಂದಾಗ ಅದರಿಮ್ದಿಳಿದ
ಮಗಳು ಯಾಕೋ ಸರಿಇಲ್ಲ ಅನಿಸಿತು. ಮನೆಗೆ ಬಂದ ಮಗಳು ಬ್ಯಾಗ್ ಬೀಸಿ ರೂಮ್ ಸೇರಿದಾಗ ದಿಗಿಲುಗೊಂಡಳು.ಎಂದೂ ಹೀಗೆ ವರ್ತಿಸದವಳು ಇಂದೇಕೆ ..ಇಂದಿನ ಪೇಪರ್ ಚೆನ್ನಾಗಿ ಮಾಡಿರಲಿಕ್ಕಿಲ್ಲ ..ಕೊನೆ ಪೇಪರ್ ಇವತ್ತು ಎಂದು ಬೆಳಿಗ್ಗೆ ಹಾರ‍ಾಡಿ ಹೋದವಳು
ಈಗ ಈ ರೀತಿ ಸಪ್ಪಾಗಿದ್ದಾಳೆ . ದಿಗಿಲಾಯಿತು ಸುರೇಖಳಿಗೆ. ತಾನೇ ಅವಳ ಬ್ಯಾಗ್ ಎತ್ತಿಟ್ಟು ರೂಮ್ ನಲ್ಲಿ ನೋಡಿದರೆ ಕಾಟ್ ಮೇಲೆ
ಬೋರಲಾಗಿ ಮಲಗಿದ ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಗಾಬರಿಗೊಂಡು ಸುರೇಖ ಮಗಳ ಹತ್ರ ಹೋಗಿ ತಲೆಗೂದಲಲ್ಲಿ ಬೆರಳಾಡಿಸುತ್ತ ನಲ್ಮೆಯಿಂದ ಮುದ್ದುಗರೆದಳು. ಸಿಕ್ಕ ಪ್ರತಿಕ್ರಿಯೆ ಮಾತ್ರ ಸುರೇಖಳನ್ನು ಬೆಚ್ಚಿ ಬೀಳಿಸಿತು.

" ನೀವು ನನ್ನ ತಿಪ್ಪ್ಯಾಗಿಂದ ಎತ್ಕೊಂಡು ಬಂದೀರಿ ಹೌದಲ್ಲೊ ನಾ ನಿಮ್ಮ ಮಗಳಲ್ಲ ಅಲ್ಲ...." ಬಿಕ್ಕುವಿಕೆಯ ನಡುವೆಯೂ ದನಿ ಸ್ಪಷ್ಟವಾಗಿತ್ತು. ಸುಮನ್ ಕಂಪಿಸುತ್ತಿದ್ದಳು. ಅತ್ತು ಅತ್ತು ಕಣ್ಣು ಕೆಂಪಾಗಿದ್ದವು. ಮಗಳ ರೂಪ ಮೇಲಾಗಿ ಅವಳು
ಆಡಿದ ಮಾತು ಸುರೇಖಳನ್ನು ದಂಗಾಗಿಸಿತು.ಹತ್ತು ವರ್ಷ ಮುಚ್ಚಿಟ್ಟ ರಹಸ್ಯ ಹೀಗೆ ಹೊರಬೀಳಬಹುದು ಅದೂ ಮಗಳೇ ಹೀಗೆ
ಪ್ರಶ್ನೆಮಾಡಿಯಾಳು ಇದು ಅವಳು ಊಹಿಸಿರಲಿಲ್ಲ. ಗಂಡ ಸುರೇಶ ಈ ಬಗ್ಗೆ ಅನೇಕಬಾರಿ ಚರ್ಚಿಸಿದ್ದ. ನಿಜ ಏನು ಮಗಳಿಗೆ ಹೇಳಿ
ಬಿಡುವ ಅವನ ವಾದ ಸುರೇಖಳಿಗೆ ಸರಿ ಅನಿಸಿರಲಿಲ್ಲ. ತಾನು ಬಚ್ಚಿಟ್ಟುಕೊಂಡಿದ್ದು ತಪ್ಪಲ್ಲ ಇದು ಅವಳ ನಿಲುವು.
ಮಗಳು ಪ್ರಶ್ನೆಕೇಳಿ ಎದೆಮೇಲೆ ಈ ರೀತಿ ಪ್ರಹಾರ ಮಾಡಬಹುದೇ..

ಸುಮನ್ ಳನ್ನು ಬಾಚಿ ತಬ್ಬಿದವಳು ತಡೆಯಲಾರದೆ ಅಳಲು ಶುರುಮಾಡಿದಳು.ತಾಯಿಯಿಂದ ಕೊಸರಿ ಬಿಡಿಸಿಕೊಂಡ ಸುಮನ್ ದೂರ
ನಿಂತಳು. ಮಗಳ ಈ ಪ್ರತಿಕ್ರಿಯೆ ಸುರೇಖಳಿಗೆ ನೋವು ತಂತು.

"ರೂಪಾ ಎಲ್ಲ ಹೇಳಿದ್ಲು ಅಕಿ ಮನ್ಯಾಗ ನಿನ್ನೆ ಇದ್ನ ಮಾತಾಡತಿದ್ರಂತ.. ಇದು ಖರೆ ಅದ ಅಲ್ಲ...?"
ಮಗಳ ಪ್ರಶ್ನೆಗೆ ಸುರೇಖಳ ಬಳಿ ಉತ್ತರ ಇರಲಿಲ್ಲ.
-----------------೦-----------------------------೦-------------------------------೦-----------------------------------------------------

ಸುರೇಶ ಬ್ಯಾಂಕಿನಲ್ಲಿ ಅಧಿಕಾರಿ.ಹೆಂಡತಿಯಿಂದ ಫೋನ ಬಂದಾಗ ಅವಳ ದನಿ ಗಾಬರಿಯಿಂದ ಕೂಡಿದ್ದು
ಏನೋ ಹೇಳಹೊರಟವಳು ತಡವರಿಸುವದನ್ನು ಕಂಡವ ತಾ ಹೊರ‍ಟುಬರುವುದಾಗಿ ಹೇಳಿದ. ಬೈಕ್ ಮೇಲೆ ಹೊರಟಾಗಲೂ ಏನಾಗಿರಬಹುದು ಎಂಬ ಯೋಚನೆ ಆಗಿತ್ತು. ಮನೆ ತಲುಪಿದಾಗ ಹಾಲ್ ನಲ್ಲಿ ಆತಂಕದಿಂದ ಕುಳಿತ ಸುರೇಖ ಕಂಡಳು.
ಇವನನ್ನು ನೋಡಿದವಳು ಇವನ ಎದೆಗೊರಗಿ ಅಳಲಿಟ್ಟಾಗ ಗಾಬರಿಗೊಂಡ ಸುರೇಶನಿಗೆ ಕಾಣಿಸಿದ್ದು ಮಗಳ ಬ್ಯಾಗು ಅಂದರೆ
ಮಗಳು ಮನೆಯಲ್ಲಿದ್ದಾಳೆ ಹೆಂಡತಿಯ ಮುಖ ಎತ್ತಿ ಹಣೆಗೆ ಮುತ್ತು ನೀಡಿದವ ಏನಾಯಿತೆಂದು ಕೇಳಿದ. ಹೆಂಡತಿಯ ಅಳುವೇ ಉತ್ತರವಾಗಿತ್ತು.
ನಿಧಾನವಾಗಿ ಸುರೇಖ ಎಲ್ಲ ಹೇಳಿದಳು. ಸುರೇಶ ಶಾಂತವಾಗಿ ಕೇಳಿಸಿಕೊಂಡ. ಒಂದಿಲ್ಲೊಂದು ದಿನ ಈ ಸ್ಥಿತಿ ಎದುರಾಗಬಹುದು ಇದು ಅವ ಅಂದಾಜಿಸಿದ್ದ.
ಹೆಂಡತಿಗೂ ತಿಳಿ ಹೇಳುವ ಪ್ರಯತ್ನ ಮಾಡಿದ್ದ. ಸುರೇಖ ಭಾವುಕಳಾಗುತ್ತಿದ್ದಳು ಏನೋ ಗಾಬರಿ ಅವಳಲ್ಲಿರುತ್ತಿತ್ತು.ಅವಳ ಹೆದರಿಕೆಯ ಕಾರಣ ಸುರೇಶನಿಗೂ
ಗೊತ್ತಿತ್ತು. ಹಾಗಂತ ಅವ ಪಲಾಯನವಾದಿಯಾಗಲು ಅವನಿಗೆ ಇಷ್ಟವಿರಲಿಲ್ಲ. ಬದಲು ಮಗಳಿಗೆ ತಮ್ಮಿಂದಲೇ ನಿಜ ಸಂಗತಿ ಗೊತ್ತಾಗಬೇಕು ಬೇರೆ ಯಾರಿಂದಾದರೂ
ಅವಳಿಗೆ ತಿಳಿಯುವುದು ಅವನಿಗೆ ಬೇಡವಾಗಿತ್ತು.ಈಗ ಮಗಳಿಗೆ ಗೊತ್ತಾಗಿ ಹೋಗಿದೆ ಮುಚ್ಚಿಡುವುದರಲ್ಲಿ ಲಾಭವಿಲ್ಲ ಆದರೆ ಸುಮನ್ ಳ ಎಳೆ ಮನಸ್ಸಿನ ಮೇಲೆ
ಇದು ಯಾವ ರೀತಿ ಪರಿಣಾಮ ಬೀರಬಹುದು. ಇದು ಕಸಿವಿಸಿ ಅವನದು. ಅಳುಕುತ್ತಲೇ ಸುಮನ್ ಇದ್ದ ರೂಮಿಗೆ ಹೋದ.....

--------------------------------೦------------------------------------೦--------------------------------------೦----------------------

ಮದುವೆಯಾಗಿ ನಾಲ್ಕು ವರ್ಷಕಳೆದಿದ್ದವು, ಸುರೇಖಳಿಗಿಂತಲೂ ಅವಳ ತಾಯಿ ಆತಂಕಕ್ಕೆ ಒಳಗಾಗಿದ್ದರು. ಅವರ ಒತ್ತಾಯಕ್ಕೆ ಮಣಿದು ಸುರೇಖ
ಡಾಕ್ಟರ್ ಕಡೆ ಹೋಗಿದ್ದು.ಟೆಸ್ಟ ಎಲ್ಲ ಮುಗಿಸಿದ ಡಾಕ್ಟರು ಮರುದಿನ ಗಂಡನ ಜೊತೆ ಬರಲಿಕ್ಕೆ ಹೇಳಿದರು.ಮರುದಿನ ಸುರೇಶ ಹಾಗೂ ಸುರೇಖಳ ಮುಂದೆ ಬಿಚ್ಚಿಟ್ಟ
ಸಂಗತಿ ಸುಲಭವಾಗಿ ಜೀರ್ಣಿಸಲಾರದ್ದು. ಸುರೇಖಳ ಗರ್ಭಾಶಯಮಗುವನ್ನು ಹೆರಲು ಸಮರ್ಥವಾಗಿರಲಿಲ್ಲ. ಮಗು ಆಗುವ ಚಾನ್ಸು ಬಹಳ ಕಡಿಮೆ ಎಂದಾಗ ದಂಪತಿಗಳು
ಕಂಗಾಲಾದರು. ಬೇರೆ ಡಾಕ್ಟರ್ ಬಳಿಯೂ ಇದೇ ಅಭಿಪ್ರಾಯ ವ್ಯಕ್ತವಾದಾಗ ಸುರೇಖ ಹೌಹಾರಿದಳು. ತನ್ನ ಮಡಿಲು ಮಗು ಇಲ್ಲದೆ ಬರಿದು ಈ ವಾಸ್ತವ ಅವಳಿಗೆ
ಆಘಾತ ತಂದಿತ್ತು. ಸುರೇಶನಿಗೂ ಬೇಸರ ಆಗಿತ್ತು ಹಾಗಂತ ಹೆಂಡತಿ ಎದಿರು ಅಧೀರತನ ತೋರುವಹಾಗಿರಲಿಲ್ಲ. ಸುರೇಖ ಗಂಡನಿಗೆ ಇನ್ನೊಂದು ಮದುವೆಯಾಗುವ ಸಲಹೆ
ನೀಡಿದಳು.ಸುರೇಶ ನಿರಾಕರಿಸಿದ. ಹೆಂಡತಿಗೆ ಬುದ್ಧಿಹೇಳಿದ.ಸಮಸ್ಯೆ ಇದೆ ಅದನ್ನು ಎದುರಿಸುವ ಇದು ಅವನ ಆಶಾವಾದ.

ಸುರೇಖ ದೇವರಿಗೆಲ್ಲ ಹರಕೆ ಹೊತ್ತಿದ್ದಳು. ಸುರೇಶ ಹೆಂಡತಿಯ ಒತ್ತಾಯಕ್ಕೆ ಪೂಜೆ ಆರತಿ ಹೀಗೆ ಭಾಗಿ ಆಗುತ್ತಿದ್ದ. ಆದರೆ ಅವನ ಮನದಲ್ಲಿ ಬೇರೆ ಯೋಚನೆ
ಸಾಗಿತ್ತು. ಈ ನಿರ್ಧಾರ ಅವನೊಬ್ಬನೇ ತೆಗೆದುಕೊಳ್ಳುವ ಹಾಗಿರಲಿಲ್ಲ. ಸುರೇಖ ಆ ನಿರ್ಧಾರಕ್ಕೆ ಒಪ್ಪುತ್ತಾಳೊ ಇಲ್ಲವೊ ಅವನಿಗೆ ಖಾತ್ರಿ ಇರಲಿಲ್ಲ. ಸುರೇಶ ಮಗುವನ್ನು ದತ್ತು
ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದ. ಅನಾಥಾಲಯದಿಂದಲೆ ದತ್ತು ತೆಗೆದುಕೊಳ್ಳುವುದು ಇದು ಅವ ತಗೊಂಡ ನಿರ್ಧಾರ. ತನ್ನ ನಿರ್ಧಾರ ಹೆಂಡತಿಗೆ ಹೇಳಿದ. ಸುರೇಖ ಹೌಹಾರಿದಳು.
ಗಂಡ ಈ ರೀತಿಯಾಗಿ ವಿಚಾರ ಮಾಡಬಹುದು ಇದು ಅವಳಿಗೆ ಅಪಥ್ಯ ವಾಗಿತ್ತು. ಬಲವಾಗಿ ವಿರೋಧಿಸಿದಳು. ಸುರೇಶ ಹೆಚ್ಚಿಗೆ ಬಲವಂತ ಮಾಡಲಿಲ್ಲ. ಎರಡು ದಿನ ಸುಮ್ಮನಿದ್ದ
ಸುರೇಖ ಗಂಡನ ಮಾತಿಗೆ ಹುಂಗುಟ್ಟಿದಾಗ ಸ್ವತಃ ಸುರೇಶನಿಗೆ ಆಶ್ಚರ್ಯವಾಗಿತ್ತು. ಹೆಂಡತಿಗೆ ಮುಂದೆ ಬರಲಿರುವ ಚಾಲೆಂಜ್ ಗಳ ಬಗ್ಗೆ ತಿಳಿಹೇಳಿದ. ಅವಳ ನಿರ್ಧಾರ ಪಕ್ಕಾ ಅನಿಸಿದಾಗ
ತಾ ಈ ಮೊದಲೇ ಗುರ್ತುಮಾಡಿಕೊಂಡ ಸ್ವಯಂಸೇವಾ ಸಂಸ್ಥಾಗೆ ಪತ್ರ ಹಾಕಿದ. ಗಂಡ ಹೆಂಡತಿ ತಗೊಂಡ ಈ ನಿರ್ಧಾರ ಇಬ್ಬರ ಮನೆತನದ ಹಿರಿತಲೆಗಳಿಗೆ ಹಿಡಿಸಿರಲಿಲ್ಲ.
ಅದರಲ್ಲಿ ಸುರೇಶನ ಸೋದರಮಾವ ತನ್ನ ಮೂರು ಮಕ್ಕಳ ಪೈಕಿ ಒಬ್ಬನನ್ನು ದತ್ತು ತೆಗೆದುಕೊಳ್ಳಲು ದುಂಬಾಲು ಬಿದ್ದ. ಸುರೇಶ ನಿರ್ಣಯ ತಗೊಂಡಾಗಿತ್ತು. ಬಂಧು ಬಳಗ
ಇವರಿಗೆ ಮುಂದಿನ ಪರಿಣಾಮಗಳ ಬಗ್ಗೆ ಎಚ್ಚರಿಸಿದರು...ಹೆದರಿಸಿದರು. ಸುರೇಖ ವಿಚಲಿತಳಾದರೂ ಗಂಡನ ಪ್ರಶಾಂತ ಮುಖ ನೋಡಿ ಧೈರ್ಯ ತೆಗೆದುಕೊಳ್ಳುತ್ತಿದ್ದಳು.
ಆ ಸಂಸ್ಥೆಯ ವಿಚಾರಣೆಗಳು, ನಿಯಮಾವಳಿಗಳು ಪತ್ರವ್ಯವಹಾರ ಹೀಗೆ ಒಂದು ತಿಂಗಳು ಕಳೆಯಿತು. ಸುರೇಖಳಿಗೆ ಚಡಪಡಿಕೆ ಹೆಚ್ಚಾಯಿತು. ಅಂತೂ ಆ ಸಂಸ್ಥೆಯಿಂದ ಇವರಿಗೆ
ಬೇಕಾದ ಹಾಗೂ ಒಪ್ಪುವಂತಹ ಹೆಣ್ಣುಮಗು ಇದೆ ಬಂದು ನೋಡಿ ಎಂದು ಪತ್ರ ಬಂದಾಗ ಗಂಡ ಹೆಂಡತಿ ನಿರಾಳವಾದರು. ಬೆಂಗಳೂರಿಗೆ ಹೊರಡಲು ಅಣಿಯಾದರು.

ಆ ದಿನ ದಂಪತಿಗಳಿಬ್ಬರೂ ಮರೆಯುವ ಹಾಗಿಲ್ಲ.ಸಂಸ್ಥೆಯಲ್ಲಿ ಕಾಲಿಟ್ಟಾಗ ಇದ್ದ ದುಗುಡ ಅಲ್ಲಿನ
ಸಿಬ್ಬಂದಿಯ ಪ್ರೀತಿಯ ಮಾತಿನಿಂದ ಮಾಯವಾಗಿತ್ತು. ಸ್ವಲ್ಪ ಹೊತ್ತಿಗೆ ಬೆಚ್ಚನೆ ಅರಿವೆಯಲ್ಲಿ ಸುತ್ತಿದ ಮಗುವನ್ನು ತೆಗೆದುಕೊಂಡು
ಬಂದ ಆಯಾ ಸುರೇಖಳ ಕೈಯಲ್ಲಿಟ್ಟಾಗ ಸುರೇಖ ಮೂಕವಾದಳು. ಮುಷ್ಟಿಬಿಗಿದ ಪುಟ್ಟಕೈಗಳು..ಪುಟ್ಟ ಪಾದಗಳು..
ಒಂದು ತಿಂಗಳೂ ತುಂಬಿರದಿದ್ದ ಕೂಸು. ಅದರ ಅನುಭೂತಿಯಲ್ಲಿ ತೇಲಿಹೋದಳವಳು.ಮೆಲ್ಲಗೆ ಕಣ್ಣು ತೆರೆದವಳು ಬೆಳಕಿನ ಪ್ರಖರತೆಗೆ ಮತ್ತೆ ಕಣ್ಣು ಮುಚ್ಚಿದಳು.ಎಲ್ಲ ಫಾರ್ಮಾಲಿಟಿ ಮುಗಿದು ಮಗುವನ್ನು ಎದೆಗಾನಿಸಿಕೊಂಡು ದಂಪತಿ ಹೊರನಡೆದರು.
ಮುಂದಿನ ದಿನಗಳು ಅವಳ ಲಾಲನೆಯಲ್ಲಿ ಕಳೆಯಿತು. ನಾಮಕರಣ,ಮೊದಲ ವರ್ಷದ ಹುಟ್ಟುಹಬ್ಬ ಹೀಗೆ ಸಂಭ್ರಮದಲ್ಲಿ ದಿನ
ಕಳೆದುದೇ ತಿಳಿಯಲಿಲ್ಲ. .ನೋದುತ್ತಿದ್ದಂತೆ ಸುಮನ್ ಬೆಳೆದು ಶಾಲೆಗೆ ಹೊರಟಳು. ಸುರೇಶನಿಗೆ ದಿಗಿಲು ಸತ್ಯಸಂಗತಿ ಮಗಳಿಗೆ ತಿಳಿಹೇಳಬೇಕು ..ಆದರೆ ಇದಕ್ಕೆ ಹೆಂಡತಿಯ ಪ್ರಬಲ ವಿರೋಧ ಎದುರಾಯಿತು.ಸುರೇಖ ಸುಮನ್ ಬಗ್ಗೆ ಪಾಸೆಸಿವ್ ಆಗಿದ್ದಳು.
ಅವಳಿಗೆ ಚಿಕ್ಕ ನೋವಾದರೂ ಇವಳಿಗೆ ತಳಮಳವಾಗುತ್ತಿತ್ತು.
--------------------೦------------------------------೦-----------------------------------೦---------------------------------------

ಮಗಳ ಜೊಂಪುಗೂದಲಲ್ಲಿ ಬೆರ‍ಳಾಡಿಸುತ್ತ ಸುರೇಶ ಕುಳಿತಿದ್ದ. ಅತ್ತು ಅತ್ತು ಸುಸ್ತಾಗಿ ಸುಮನ್ ಮಲಗಿ
ಬಿಟ್ಟಿದ್ದಳು. ಸುರೇಖಳೂ ನಿದ್ದೆ ಹೋಗಿದ್ದಳು.ಸುರೇಶ ಯೋಚಿಸುತ್ತಿದ್ದ. ಹೇಗೆ ಈ ಸಮಸ್ಯೆ ಪರಿಹರಿಸುವುದು ಮಗಳ ಮುಗ್ಧ
ಮನಸ್ಸಿಗೆ ನೋವಾಗಿದೆ ನಿಜ ಆದರೆ ವಾಸ್ತವಕ್ಕೆ ಬೆನ್ನು ಮಾಡಿ ಅದೆಷ್ಟು ದಿನ ಇರೋದು. ಸತ್ಯ ಅವಳಿಗೆ ತಮ್ಮಿಂದಲೆ ಗೊತ್ತಾಗಿದ್ದರೆ ಅದರ ಪರಿಣಾಮ ಬೇರೆ ಆಗಿರುತ್ತಿತ್ತು ಆದರೆ ಬೇರೆಯವರಿಂದ ತಿಳಿಯೋದು ಆಘಾತ ತಂದಿದೆ .... ಯೋಚಿಸುತ್ತ
ಸುರೇಶ ಒಂದು ನಿರ್ಧಾರಕ್ಕೆ ಬಂದ. ನಿರಾಳವಾಗಿ ಮಲಗಿದ.

----------------------------------------------------೦-------------------------------------------------------------------------------





== ೨ ==

ಮಗಳು ನಿದ್ದೆ ಹೋಗಿದ್ದಳು. ಬಸ್ಸಿನಕುಲುಕಾಟಕ್ಕೆ ಸುರೇಖಳಿಗೆ ನಿದ್ದೆ ಬಂದಿರಲಿಲ್ಲ.ಪಕ್ಕದಲ್ಲಿರುವ
ಸುರೇಶನೂ ನಿದ್ದೆ ಹೋಗಿದ್ದ. ಬಸ್ಸು ಮೈಸೂರು ಮುಟ್ಟುವ ಹಾದಿಯಲ್ಲಿತ್ತು. ಗಾಳಿಗೆ ಸುಮನ್ ಕೂದಲು ಹಾರುತ್ತಿದ್ದವು.
ಕಿಟಕಿ ಮುಚ್ಚಿ ಮಗಳಸುತ್ತ ಶಾಲು ಹೊದಿಸಿದಳು. ಟೂರ್ ಎಂದು ಗಂಡ ಹೇಳಿದ್ದ ಉತ್ಸಾಹ ಇರಲಿಲ್ಲ. ಮಗಳಿಗೆ ನಾವೇನು
ಕಮಿಮಾಡಿದೆವು ಅವಳ್ಯಾಕೆ ಅರ್ಥ ಮಾಡ್ಕೊಳ್ಳಲ್ಲ ಇದೇ ಪ್ರಶ್ನೆ ಸುರೇಖಳಿಗೆ ಬಾಧಿಸುತ್ತಿತ್ತು. ಸುಮನ್ ಸಹ ಪ್ರವಾಸಕ್ಕೆ
ಅಷ್ಟೇನು ಉತ್ಸಾಹ ತೋರಿರಲಿಲ್ಲ.ಸುರೇಶ ಒಬ್ಬನೇ ಲವಲವಿಕೆ ಯಿಂದಿದ್ದ. ಅವನ ಎಣಿಕೆ ಬೇರೆ ಆಗಿತ್ತು. ಜಾಗ ಬದಲಾವಣೆ
ಒಳ್ಳೆಯದು ಅದರಲ್ಲೂ ಮೈಸೂರು ಈಗ ದಸರಾದ ಸಂಭ್ರಮದಲ್ಲಿತ್ತು. ಮಗಳರಜೆ ಅ ಸಡಗರದಲ್ಲಿ ಕಳೆಯಲಿ, ಕಹಿ ಎಲ್ಲ
ಮರೆಯಲಿಇದು ಅವನ ಬಯಕೆ. ನಿದ್ದೆ ಕಳೆದು ಎಚ್ಚರವಾದವ ಸುರೇಖಳನ್ನು ಗಮನಿಸಿದ. ಮಗಳ ಪ್ರಶ್ನೆ ನ್ಯಾಯವಾದದ್ದೇ
ಬೇರೆಯವರಿಂದ ಹುಟ್ಟಿನ ರಹಸ್ಯ ತಿಳಿದಾಗ ಸಹಜವಾಗಿಯೇ ಪ್ರತಿಕ್ರಿಯಿಸಿದ್ದಾಳೆ. ಈ ವಿಷಯ ಅವಳಿಗೆ ತಿಳಿಸುವುದು ಸರಿ ಇದು
ಅವನ ವಾದ.ಸುರೇಖಳಿಗೆ ದಿಗಿಲು ನಿಜ ತಿಳಿದು ಮಗಳು ಎಲ್ಲಿ ವಿಮುಖಳಾಗುತ್ತಾಳೊ . ಹಾಗೆ ನೋಡಿದರೆ ಅವಳ ಆತಂಕವು
ಸರಿಯೇ . ಒಟ್ಟಿನಲ್ಲಿ ಸಮಸ್ಯೆ ಎದುರಾಗಿದೆ ಈಗ ಅಂದುಕೊಂಡಂತೆ ನಡೆದರೆ ಸಮಸ್ಯೆಗೆ ಪರಿಹಾರವೂ ಇದೆ.
ಬಸ್ಸು ಮೈಸೂರು ನಿಲ್ದಾಣ ಪ್ರವೇಶಿಸಿತು. ಮಲಗಿದ್ದ ಸುಮನ್ ಳನ್ನು ಎಚ್ಚರಗೊಳಿಸಲು ಮುಂದಾದ.

-----------------------೦---------------------------------------೦---------------------------------------------------------------

ಮೈಸೂರು ದಸರಾಹಬ್ಬದ ಸಡಗರದಲ್ಲಿ ಮೀಯುತ್ತಿತ್ತು. ಬ್ಯಾಂಕ್ ನ ಅತಿಥಿಗೃಹದಲ್ಲಿ ಮೊದಲೇ
ಬುಕ್ ಮಾಡಿದ್ದರಿಂದ ವಸತಿ ಸಮಸ್ಯೆ ಇರಲಿಲ್ಲ.ಚಾಮುಂಡಿ ಬೆಟ್ಟ, ಝೂ,ಕಾರಂಜಿ ಕೆರೆ ಹೀಗೆ ಎಲ್ಲಿ ನೋಡಿದರೂ ಜನ. ಸುಮನ್
ಳಲ್ಲಿ ಉತ್ಸಾಹ ಮೂಡುತ್ತಿತ್ತು. ಹೋದವಾರದ ಬಿಗುವು ಎಲ್ಲ ಕಳಚಿಕೊಂಡಿದ್ದಳು.ಹೊಸವಾತಾವರಣಕ್ಕೆ ಸ್ಪಂದಿಸುತ್ತಿದ್ದಳು.
ರಂಗನತಿಟ್ಟು ನಲ್ಲಿ ಹತ್ತಿರದಿಂದ ತರತರಹದ ಪಕ್ಷಿಗಳನ್ನು ಹತ್ತಿರದಿಂದ ನೋಡಿ ಉಲ್ಲಸಿತಳಾದಳು. ಬಲಮುರಿಯಲ್ಲಿ ನೀರು
ಬಿಟ್ಟು ಏಳಲು ಅವಳಿಗೆ ಮನಸೇ ಇರಲಿಲ್ಲ. ಮಗಳ ಉತ್ಸಾಹ ಸುರೇಖಳಲ್ಲೂ ಹೊಸ ಉಮೇದು ತಂದಿತ್ತು. ಮಗಳು ಇನ್ನು
ಮುಂದೆ ನಗುವುದೇ ಇಲ್ಲ ಅಂತ ಆತಂಕಕ್ಕೊಳಗಾಗಿದ್ದಳು. ಭಯ ಕಳೆದುಮಗಳ ಜೊತೆ ಹಿತವಾಗಿ ನಲಿದಳು.

ಮೈಸೂರಿನಲ್ಲಿ ಮೂರುದಿನ ಕಳೆದದ್ದೇ ಗೊತ್ತಾಗಿರಲಿಲ್ಲ. ಅರಮನೆ ದೀಪಾಲಂಕಾರ ನೋಡುತ್ತಿದ್ದ
ಸುರೇಖಳಿಗೆ ಗಂಡ ಮರುದಿನ ಬೆಂಗಳೂರಿಗೆ ಹೋಗುವ ಪ್ರಸ್ತಾಪ ಮಾಡಿದ. ಅಲ್ಲಿಂದ ಮತ್ತೆ ಹುಬ್ಬಳ್ಳಿ ವಾಪಸ್ ಹೋಗುವುದು
ಎಂದು ಹೇಳಿದ. ಸುಮನ್ ಮನಸ್ಸಿಲ್ಲದ ಮನಸ್ಸಿನಿಂದ ಮೈಸೂರು ಬಿಟ್ಟಳು. ದಾರಿ ಮಧ್ಯೆ ಸಿಗೋ ವಂಡರ್ ಲಾ ದಲ್ಲಿ ಸಂಜೆವರೆಗೆ
ಕಳೆದುಹುರುಪಿನಿಂದ ಬೆಂಗಳೂರು ಸೇರಿಕೊಂಡರು.

ಗಂಡ ಏನೋ ಯೋಜನೆ ಹಾಕಿಯೇ ಈ ಟೂರ್ ಫಿಕ್ಸಮಾಡಿದಾನೆ ಇದು ಸುರೇಖಳಿಗೆ ಅಂದಾಜಿತ್ತು.
ಆದರೆ ಕೇಳಿದರೂ ಅವನ ಮುಗುಳ್ನಗೆ ಮಾತ್ರ ಉತ್ತರವಾಗಿತ್ತು, ಬೆಂಗಳೂರು ಜತೆ ಒಂದು ಅವಿನಾಭಾವ ಸಂಬಂಧ ಇದೆ ಸುರೇಖಳಿಗೆ
ತಾಯ್ತನದ ಅನುಭೂತಿ ಕೊಟ್ಟ ಊರಿದು. ಭಯ ಮಿಶ್ರಿತ ಕಂಪನ ಅವಳಲ್ಲಿ. ಮರುದಿನ ಅವರು ಕುಳಿತ ಆಟೋ ಬಾಣಸವಾಡಿ ಕಡೆ
ತಿರುಗಿದಾಗ ಎದೆ ಡವ ಗುಟ್ಟಿತು ಸುರೇಶ ಮಾತ್ರ ನಿರಾತಂಕವಾಗಿದ್ದ. ಸುಮನ್ ಅಪ್ಪ ಕೊಡಿಸಿದ ವಿಡಿಯೋ ಗೇಮ್ ನಲ್ಲಿ ಮುಳುಗಿದ್ದಳು. ರಸ್ತೆಗಳು ಪರಿಚಿತ ಅನಿಸಿದವು ಸುರೇಖಳಿಗೆ ಆತಂಕದಿಂದ ಗಂಡನ ಕೈ ಹಿಡಿದಳು. ಅವಳ ಕೈಗೆ ಮೆಲುವಾಗಿ ತಟ್ಟಿದ
ಸುರೇಶ ಮುಗುಳ್ನಕ್ಕ. ಆಟೋ ಒಂದು ಕಟ್ಟಡದ ಮುಂದೆ ನಿಂತಿತ್ತು. ಕಟ್ಟಡದ ವಿನ್ಯಾಸ ಬದಲಾಗಿರಲಿಲ್ಲ. ತಂಗಾಳಿ ಬೀಸುತ್ತಿದ್ದರೂ ಸುರೇಖ ಬೆವರಿದ್ದಳು. ಗೇಟು ತೆಗೆದು ಒಳನಡೆದ ಗಂಡ ಹಾಗೂ ಮಗಳನ್ನು ಹಿಂಬಾಲಿಸಿದಳು....

-----------------------------೦--------------------------------------೦-----------------------------------------------------------------

ಎಲ್ಲ ಮೊದಲೇ ಯೋಜನೆ ಹಾಕಿಕೊಂಡಿದ್ದ ಸುರೇಶ. ಆ ಬಗ್ಗೆ ಸಂಸ್ಥೆಯ ಅಧಿಕಾರಿಗಳಲ್ಲಿ ಮಾತೂ
ಆಡಿದ್ದ.ಸಹಕಾರ ಕೊಡುವುದಾಗಿ ಹೇಳಿದ್ದರು.ಅವರೆಲ್ಲ ಈಗ ಆಟೋದಿಂದಿಳಿದು ಪ್ರವೇಶಿಸಿದ ಸಂಸ್ಥೆಯಿಂದಲೇ ಸುಮನ್ ಳನ್ನು
ದತ್ತು ತೆಗೆದುಕೊಂಡಿದ್ದರು. ಸುರೇಶನಿಗೂ ಪರಿಣಾಮದ ಬಗ್ಗೆ ಅಳುಕಿತ್ತು ಇದು ಬಹಳ ಸೂಕ್ಷ್ಮ ವಿಚಾರ. ಮಗಳ ಪ್ರತಿಕ್ರಿಯೆ ಮೇಲೆ
ಎಲ್ಲ ನಿಂತಿತ್ತು. ಆ ಸಂಸ್ಥೆಯ ಮೇಲಧಿಕಾರಿಣಿ ಇವರನ್ನು ಆದರದಿಂದ ಬರಮಾಡಿಕೊಂಡಳು. ಕಾಫಿ ಸೇವನೆ ನಂತರ ಸುಮನಳನ್ನು
ಮೇಲಿನ ರೂಮಿನಲ್ಲಿರೋ ಆಟಿಗೆ ತೋರಿಸುವ ನೆವದಿಂದ ಕರೆದೊಯ್ಯಲಾಯಿತು...ಸುರೇಶ ,ಸುರೇಖ ಮಗಳು ಮೇಲೆ ಹೋಗುವುದನ್ನೇ ನೋಡುತ್ತಿದ್ದರು, ಸುರೇಖಳ ತಲೆ ಗೊಂದಲದ ಗೂಡಾಗಿತ್ತು.ಅವಳ ಪ್ರಶ್ನೆಗಳಿಗೆಲ್ಲ ಸುರೇಶನ ಮುಗುಳ್ನಗೆ
ಉತ್ತರವಾಗಿತ್ತು.
------------------೦---------------------------------೦--------------------------------೦---------------------------------------------

ಆಟಿಗೆ ನೋಡುತ್ತ ಕುಳಿತ ಸುಮನ್ ಸುತ್ತಲೂ ಕಣ್ಣುಹಾಯಿಸಿದಳು. ಅವಳ ಅರಿವಿಗೆ ನಿಲುಕದ ಜಾಗೆ
ಸುತ್ತ ತೊಟ್ಟಿಲುಗಳು..ಅವುಗಳಲ್ಲಿನ ಕೂಸುಗಳು. ದೊಡ್ಡವನ್ನು ನೆಲದ ಕಾರ್ಪೆಟ್ ಮೇಲೆ ಬಿಡಲಾಗಿತ್ತು. ಸುತ್ತ ಹರಡಿದ ಆಟಿಗೆ
ಗಳಲ್ಲಿ ಮಗ್ನ ವಾಗಿದ್ದವು. ನಿಧಾನವಾಗಿ ತಾ ನೋಡುತಿರುವ ಜಾಗೆ ತಾನಿರುವ ಸ್ಥಳದ ಬಗ್ಗೆ ಗೊತ್ತಾಗತೊಡಗಿತು. ರೂಪಾ ಹೇಳಿದ
ಮಾತು ಗುಂಯ್ ಗುಟ್ಟಿತು. ನಾ ಅಮ್ಮನಿಗೆ ಹುಟ್ಟಿಲ್ಲ ಇದು ಗೊತ್ತಾಗಿದ್ದೇ ಇತ್ತೀಚೆಗೆ ಅಪ್ಪ ಅಮ್ಮ ಏನೋ ಮಾತಾಡುತ್ತಿದ್ದವರು ನಾ ಬಂದಿದ್ದು ನೋಡಿ ಮಾತು ನಿಲ್ಲಿಸುತ್ತಿದ್ದರು ಏನೋ ಇದೆ ಇದು ಕಸಿನ್ಸ್ ನೋಡೋ ದೃಷ್ಟಿಯಲ್ಲಿ,
ಮೌಶಿ ಕಾಕು ಅಮ್ಮನೊಡನೆ ಆಡುತ್ತಿದ್ದ ಮಾತಿನಲ್ಲಿ ಇಣುಕುತ್ತಿತ್ತು. ರೂಪ ಜಗಳ ತೆಗೆದು ಆಡಿದ ಮಾತು ಅವಮಾನ ಮಾಡಿತ್ತು.
ನಾ ಅವಳಿಗೆ ಗೆಳತಿ ಇರದಿರಬಹುದು ನಾಲ್ಕು ಜನರ ಮುಂದೆ ಹೀಗೆ ಒಮ್ಮೆಲೆ ಅಂದಾಗ ಸಿಟ್ಟು ಬಂದಿತ್ತು. ಸಿಟ್ಟು ತಿರುಗಿದ್ದು ಅಮ್ಮನ
ಮೇಲೆ ಇಷ್ಟುದಿನ ನನ್ನದು ಎಂದು ತಿಳಿದ ವಸ್ತು ನನ್ನದಲ್ಲ ಎಂದಾಗ ನೋವಾಗಿತ್ತು. ಈಗ ಎಲ್ಲ ಗೊತ್ತಾಗುತಿದೆ. ಅಂದರೆ ನಾನೂ
ಹೀಗೆ ಈಗ ಇವರಿರೋ ಜಾಗೆಯಲ್ಲಿದ್ದೆ .... ಯಾವುದೋ ಮಗು ತೊಟ್ಟಿಲಲ್ಲಿ ಮಲಗಿದ್ದು ಜೋರಾಗಿ ಅಳಲಾರಂಭಿಸಿತು.
ಆಯಾ ಒಬ್ಬಳು ಬಂದು ಅದರ ದುಬಟಿ ಬದಲಾಯಿಸಿದಳು..ಮಗು ಅಳು ನಿಲ್ಲಿಸಲಿಲ್ಲ. ಅದಕ್ಕೆ ಹಸಿವಾಗಿರಬೇಕು ಆಯಾ ಹಾಲು
ಬಾಟಲಿಯಲ್ಲಿ ತರುವವರೆಗೂ ಅದು ಅಳುತ್ತಲೇ ಇತ್ತು. ಹೌದಲ್ಲ ತಾ ಸ್ಕೂಲಿನಲ್ಲಿ ಬಿದ್ದು ಬಂದಾಗ ಅಮ್ಮ ಚಡಪಡಿಸುವುದೇಕೆ
ಹೋದ ವರ್ಷ ಜ್ವರ ಬಂದಾಗ ಇಡೀ ರಾತ್ರಿ ಅಪ್ಪ ಅಮ್ಮ ಎಚ್ಚರಿದ್ದು ಒದ್ದೆಪಟ್ಟಿ ಬದಲಾಯಿಸುತ್ತಿದ್ದುದು ನೆನಪಿಗೆ ಬಂತು.
ಅಂದರೆ ಅಮ್ಮ ಅಮ್ಮನೇ ಅವಳು ಬದಲಾಗಳು.... ಗಕ್ಕನೇ ಅಪ್ಪ ಅಮ್ಮನ ನೆನಪು ಬಂತು. ನಾ ಇಲ್ಲಿ ಏನು ಮಾಡುತಿರುವೆ
ಅವರೆಲ್ಲಿ ಗಾಬರಿಯಾಯಿತು ಸುಮನ್ ಳಿಗೆ. ಅಲ್ಲಿಂದ ಎದ್ದವಳು ಮೆಟ್ಟಿಲು ಇಳಿದು ನೋಡಿದಳು. ಗೇಟ ಹತ್ತಿರ ನಿಂತ ಅಪ್ಪ ಅಮ್ಮ ಕಂಡರು....
------------------------------೦-----------------------------------------೦----------------------------------------------------------

ಹನಿಯುತ್ತಿದ್ದ ಕಣ್ಣೀರು ಒರೆಸಿಕೊಂಡವಳಿಗೆ ಬಾಗಿಲಲ್ಲಿ ನಿಂತ ಸುಮನ್ ಕಂಡಳು.ಉದ್ವೇಗದಿಂದ
ಕಂಪಿಸುವಳನ್ನು ನೋಡಿ ಗಾಬರಿ ಆದಳು. ನೋಡುವುದರಲ್ಲಿಯೇ ಮಗಳು ತೆಕ್ಕೆ ಹಾಕಿ ಅಳುತ್ತಿದ್ದಳು."ಸಾರಿ ಅಮ್ಮ..." ಉದ್ವೇಗದಿಂದ ದನಿ ಕಂಪಿಸುತ್ತಿತ್ತು. ಮಗಳನ್ನು ಬಾಚಿ ತಬ್ಬಿದ ಸುರೇಖ ಸಹ ಅಳುತ್ತಿದ್ದಳು.ನೋಡುತ್ತಿದ್ದ ಸುರೇಶನ ಕಣ್ಣೂ
ಹನಿಗೂಡಿದವು. ಆಗಸದಲ್ಲಿ ಮಂಜು ಕರಗಿ ಸೂರ್ಯ ಮಿನುಗುತ್ತಿದ್ದ.

ಶುಕ್ರವಾರ, ಆಗಸ್ಟ್ 21, 2009

ಹೀಗೊಂದು ಭೇಟಿ



ಮನೆ ಸೇರಿದಾಗ ಕತ್ತಲಾಗಿತ್ತು. ನಾಲಗೆ ತಿಕ್ಕಿ ತಿಕ್ಕಿ ತೊಳೆದೆ. ವಾಸನೆ ಇನ್ನೂ ಬರುತ್ತಿದೆ ಎನ್ನುವ ಗುಮಾನಿ ಇದ್ದೇಇತ್ತು. ಅಡಿಗೆ ಮನೆಗೆ ಹೋಗಿ ಯಾಲಕ್ಕಿಯ ಎಸಳು ಬಾಯಾಡಿಸಿದೆ. ತಲೆ ಭಾರ ವಾಗಿತ್ತು. ಅದು ವೈನ್ ನ ಪ್ರಭಾವವೊ
ಅಥವಾ ದೀಪಾ ಆಡಿದ ಮಾತಿನದೊ ಗೊತ್ತಿಲ್ಲ. ಅತ್ತೆ ಟಿವಿ ಮುಂದೆ ಕುಳಿತಿದ್ದರು.ಇವರು ಬಂದಿದ್ದರು. ಚಪಾತಿ ಮಾಡಲು ಹಿಟ್ಟು
ಕಲಿಸಲು ಶುರು ಮಾಡಿದೆ. ಕೈಗಳು ಯಾಂತ್ರಿಕವಾಗಿ ಕೆಲಸ ಮಾಡಿತ್ತಿದ್ದವು. ಮನಸ್ಸು ಎಲ್ಲೊ ಅಲೆಯುತ್ತಿತ್ತು. ದೀಪಾಳ
ಅನಿರೀಕ್ಷಿತ ಭೇಟಿ,ಅವಳೊಡನೆ ಚರ್ಚಿಸಿದ ವಿಷಯಗಳು..,ಕೊನೆಯಲ್ಲಿ ಅವಳಾಡಿದ ಮಾತು ಎಲ್ಲ ಗುಂಯ್ ಗುಡುತ್ತಿದ್ದವು.
ಇವರು ಹತ್ತಿರ ಬಂದು ನಿಂತಿದ್ದು, ಎರಡು ಸಾರಿ ಕರೆದಿದ್ದು ನನಗೇ ಗೊತ್ತೇ ಆಗಿರಲಿಲ್ಲ.

ಸೀರೆ ಸೆರಗು ಸರಿಸಿ ಹೊಟ್ಟೆಯ ಮೇಲೆ ಕೈ ಆಡಿಸುತ್ತ ಇವರು ಮುದ್ದುಗರೆದರು. ಗಡ್ಡ ಚುಚ್ಚಿದರೂ ಹಿತ ಇತ್ತು.
"ಯಾಕ ರಾಣಿಯವ್ರಿಗೆ ಕೆಲಸ ಬಹಾಳ ಇತ್ತೇನು...." ಇವರ ಪ್ರಶ್ನೆ ಸಹಜವಾಗಿತ್ತು.
"ಇಲ್ಲ ನನ್ನ ಹಳೆ ಫ್ರೆಂಡ ಸಿಕ್ಕಿದ್ಲು ಅಕಿ ಜೋಡಿ ಸ್ವಲ್ಪ ಶಾಪಿಂಗ್ ಹೋಗಿದ್ದೆ..." ಅವರಿಂದ ಬಿಡಿಸಿಕೊಳ್ಳುತ್ತ ಹೇಲಿದೆ. ವೈನ್ ವಾಸನಿ ಇವರಿಗೂ ಬಡಿತೊ ಹೆಂಗ ಎಂಬ ದಿಗಿಲು ನನಗೆ. ಸುಜನ ಅಡಿಗೆ ಮನೆಗೆ ಬಂದಳು. ನಿರಾಳ ಆತು. ಮಗಳೊಡನೆ
ಇವರು ಹೊರನಡೆದರು.

--------೦-----------೦----------೦-------------೦
ಗಡಿಯಾರ ನೋಡಿದೆ ಹನ್ನೆರಡಾಗಿತ್ತು... ಕಾಟಿನ ಕೆಳಗಡೆ ಬಿದ್ದಿದ್ದ ನೈಟಿ ತೆಗೆದುಕೊಂಡು ಬಾತ್ ರೂಮ್ಗೆ
ಹೋದೆ. ಬೇಸಿನ್ ನ ಕನ್ನಡಿಯಲ್ಲಿ ಮುಖದ ಮಿನುಗುವ ನಗುವಿಗೆ ಯಾವ ಅರ್ಥ ಇದೆ.. ವಾರಗಟ್ಟಲೆ ಹಸಿದಿದ್ದೆ ಹೊಟ್ಟೆ
ತುಂಬಿದುದರ ಸಂಕೇತವೆ ಅಥವಾ ಈ ನಗು ಸಹ ನನ್ನಂತೆಯೇ ಯಾಂತ್ರಿಕ ವೇ..ತಳಮಳ ಮರೆಮಾಚಲು ನಾ ಧರಿಸಿದ
ಮುಖವಾಡವೇ....
ದೀಪಾ ಹೇಳಿದ್ಲು....." ನೀ ಏನೋ ಬಹಳ ಆರಾಮಿದ್ದಿ ಅಂತ ತಿಳಕೊಂಡಿ ಆದ್ರ ಅದು ಖರೇ ಅಲ್ಲ ..ನೀ ಒಂದು ಮುಖವಾಡ
ಹಾಕ್ಕೊಂಡಿ ನಿನ್ನ ಸುತ್ತಲೂ ಗಂಡ,ಮಗಳು , ಸಂಸಾರದ ಬೇಲಿ ಅದ. ಆ ಪಂಜರದಾಗ ನೀನಿದ್ದಿ ಒಂದು ಸಲ ಇದನ್ನು ಬಿಟ್ಟು
ಬ್ಯಾರೇ ಜಗತ್ತೂ ಅದ ಅಂತ ನೀ ವಿಚಾರ ಮಾಡೇ ಇಲ್ಲ ಅಲ್ಲ ?"
ಅವಳ ಮಾತು ನನಗೆ ಸರಿ ಅನಿಸಲಿಲ್ಲ ಅಥವಾ ಅವಳ ನೇರನುಡಿ ನನ್ನೊಳಗೆ ಅದುವರೆಗೂ ಸುಪ್ತವಾಗಿದ್ದ ಭಾವನೆಗಳನ್ನು
ಕೆದಕಿತೋ ಹೇಗೆ ಈ ತಳಮಳ ಮನದ ಮೂಲೆಯಲ್ಲಿ ಎಲ್ಲೋ ಇತ್ತು ದೀಪಾ ಯಾಕೆ ಅದನ್ನು ಎಬ್ಬಿ ತೆಗೆದ್ಲು......

------------೦-----------೦--------------೦------------೦

ಕಾಲೇಜಿನಲ್ಲಿ ನಾ ಬಹಳ ಹಿಂಜರಿಕೆ ಉಳ್ಳ ಹುಡುಗಿ ಒಬ್ಬ ಹುಡುಗ ಚುಡಾಯಿಸಿದಾಗ ಅಳುತ್ತ ಕುಳಿತವಳನ್ನು ನೋಡಿ ನಕ್ಕವರೇ ಬಹಳ ಜನ. ಆದರೆ ದೀಪಾ ಮುಂದಾದಳು ಆ ಹುಡುಗನಿಗೆ ದಬಾಯಿಸಿದಳು...ಅಷ್ಟೇ ಅಲ್ಲ
ಪ್ರಿನ್ಸಿಪಾಲ್ ಮುಂದೆ ಅವ ಕ್ಷಮೆ ಕೇಳುವ ಹಾಗೆ ಮಾಡಿದ್ಲು. ಸ್ವಭಾವದಲ್ಲಿ ಇಬ್ಬರೂ ತದ್ವಿರುದ್ಧ ಆದರೂ ನಾವು ಹತ್ತಿರದ
ಗೆಳತಿಯರಾದೆವು.ಅವಳ ಬಳಿ ದುಡ್ಡಿತ್ತು ಧಾರಾಳವಾಗಿ ಖರ್ಚು ಮಾಡುತ್ತಿದ್ದಳು.ಅವಳ ತಾಯಿ ಬಹಳ ಮೊದಲೇ ತೀರಿಕೊಂಡಿದ್ದರು.. ತಂದೆ ರಾಜಕಾರಣಿ... ಹಾಸ್ಟೆಲ್ ನಲ್ಲಿ ಇದ್ದಳು.ಆಗೀಗ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದಳು.ನನ್ನ ತಂದೆ ತಾಯಿಗೆ ಅವಳ ಹಾಗೂ ನನ್ನ ಸ್ನೇಹ ಅಷ್ಟು ಸೇರಿರಲಿಲ್ಲ. ಮುಖ್ಯವಾಗಿ ಅವಳ ತಂದೆಯ ವೈಯುಕ್ತಿಕ ಬದುಕು ಇದಕ್ಕೆ
ಕಾರಣ ವಾಗಿತ್ತು. ದಾವಣಗೆರೆಯಲ್ಲಿ ಅವರು ಯಾರೋ ಹೆಂಗಸನ್ನು ಇಟ್ಟುಕೊಂಡಿದ್ದು ಆಗಿನ ಪತ್ರಿಕೆಗಳಲ್ಲಿ ರಂಗುರಂಗಾಗಿ
ವರದಿಯಾಗಿತ್ತು. ಅವಳ ಜತೆ ಅನೇಕ ಬಾರಿ ಕೇಳಿದ್ದೆ ಅವಳ ಮುಖ ಸಣ್ಣದಾಗಿತ್ತು .. ಮುಂದೆ ಕೆಲವೇ ನಿಮಿಷ ಮತ್ತೇ ಅದೇ ಹಳೆ ದೀಪಾ...ಎದುರಾಗುತ್ತಿದ್ದಳು. ಅವಳು ವಾದಿಸುತ್ತಿದ್ದಳು----
"ನೋಡು ವಿಜಿ ನೀ ವಿಚಾರ ಮಾಡು ನನ್ನ ಅಪ್ಪ ಅನಿಸ್ಕೊಂಡವ ತನ್ನ ಚಟಕ್ಕ ಯಾರನ್ನೋ ಇಟಗೊಂಡ್ರ ಅದರಾಗ ನಂದೇನು ತಪ್ಪು ನನಗ ಅವನ ಹೆಸರು ಸಿಕ್ಕದ ಬೇಕಾದಾಗೆಲ್ಲ ರೊಕ್ಕ ಕಳಸ್ತಾನ.. ಆದ್ರ ಅವನ ಭಾನಗಡಿ ನಂಗೂ ಇರಿಸುಮಿರಿಸು ಆದ್ರೇನು ನಾ ಏನು ಮಾಡಲಿ ನನ್ಮುಂದ ಯಾವ ಚಾಯ್ಸ ಇಲ್ಲ...."

ಅವಳ ವಾದಸರಣಿ ಪೂರ್ತಿಯಾಗಿ ನಾ ಒಪ್ಪಿರಲಿಲ್ಲ ಬಹುಷಃ ನನ್ನ ಮ್ಯಾಲ ನನ್ನ ತಂದೆ ತಾಯಿ ಪ್ರಭಾವ ಇತ್ತು ಕಾಣಸ್ತದ.
ಕಾಲಚಕ್ರ ಉರಿಳಿತು..ಡಿಗ್ರಿ ಮುಗಿಸಿ ಮನೆಯಲ್ಲಿದ್ದೆ ತಂದೆ ತಾಯಿ ನನ್ನ ಮದುವೆ ಪ್ರಯತ್ನ ಜೋರಾಗಿ ಮಾಡುತ್ತಿದ್ದರು. ವರಮಹಾಶಯರು ಬಂದು ಹೋಗುತ್ತಿದ್ದರು.ಇವರು ಮೆಚ್ಚಿಕೊಂಡಿದ್ದರು. ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿ ಮದುವೆ ಮೊದಲಿನಲ್ಲಿ ಹಳ್ಳಿ ವಾಸ...ಮಜ ಇತ್ತು.ಇವರು ಹಟ ಹಿಡಿದಿದ್ದರು ನಾನೂ ಕೆಲಸಕ್ಕೆ ಸೇರಲು ...ಅವರ ಒತ್ತಾಯಕ್ಕೆ ಹುಬ್ಬಳ್ಳಿಯ ಮಹಿಳಾ ಸಹಕಾರಿ ಬ್ಯಾಂಕಿನಲ್ಲಿ ಅರ್ಜಿ ಹಾಕಿದೆ. ಕೆಲಸ ಸಿಕ್ಕಿತು...ನಾದಿನಿಯ ಮದುವೆ, ಸುಜನಾಳ ಜನನ, ಹುಬ್ಬಳ್ಳಿಯಲ್ಲಿ ಹೊಸ ಮನೆ ಖರೀದಿ..ಹೀಗೆ ಕಾಲ ಪ್ರವಾಹದಂದದಿ ಸಾಗಿತ್ತು.ಅತ್ತೆಯ ಅನಾರೋಗ್ಯ , ಮನೆ ಸಾಲದಕಂತು.
ಸುಜನಾಳ ಹೋಮ್ ವರ್ಕ ಹೀಗೆ ನನ್ನ ಜೀವನದಲ್ಲಿ ಹೊಸ ಪ್ರಯಾರಿಟಿ ತೆರೆದುಕೊಂಡವು. ವಾರಕ್ಕೊಮ್ಮೆ ಬಂದು ಹೋಗುವ ಇವರು ..ಜೀವನ ಸಾಗಿತ್ತು.

ಕೌಂಟರ್ ಹೊರಗಡೆ ಪರಿಚಿತ ಧ್ವನಿ ಕೇಳಿದಾಗ ತಲೆ ಎತ್ತಿದ್ದೆ...ದೀಪಾ ಗಾಗಲ್ ತೆಗೆದು ನಗುತ್ತಿದ್ದಳು. ಬಹಳೆ ಬದಲಾಗಿದ್ದಾಳೆ
ಅನಿಸಿತು ಜೀನ್ಸ್ ಮೇಲೆ ಹಳದಿ ಬಣ್ಣದ ಟೀ ಶರ್ಟು ,ಢಾಳಾದ ಮೇಕಪ್ಪು, ದುಬಾರಿ ಸೆಂಟು ಎಲ್ಲ ಇಲ್ಲಿಯೇ ನೋಡುತ್ತಿದ್ದಾರೆ
ಎನ್ನಿಸಿ ಕಸಿವಿಸಿ ಯಾಯಿತು. ಸಾಲದ್ದಕ್ಕೆ ಅವಳು ನನ್ನ ಅಪ್ಪಿಕೊಂಡಾಗ ಅವಳ ಸುಗಂಧ ನನ್ನಲ್ಲು ವ್ಯಾಪಿಸಿದಂಗಾಯಿತು.
ಶನಿವಾರ ಆದ್ದರಿಂರ ಮ್ಯಾನೆಜರ್ ಗೆ ಹೇಳಿ ಅವಳ ಜೊತೆ ಹೊರನಡೆದೆ.....


-----------------೦--------------------೦-----------------------೦

ಮಧ್ಯಾಹ್ನದ ಬಿರುಬಿಸಿಲಲ್ಲಿ ಅದುವರೆಗೂ ಕಾಲೇ ಇಟ್ಟಿರದಿದ್ದ ಹೊಟೆಲ್ ನ ಎಸಿ ರೂಮ್ ನಲ್ಲಿ ದೀಪಾಳ ಎದಿರು ಕುಳಿತಿದ್ದೆ. ಅವಳು ಬೀರ್ ಮಗ್ ತುಟಿಗೆ ತಾಕಿಸಿ
ಕುಳಿತಿದ್ದಳು. ಸರಿಸುಮಾರು ಹತ್ತು ವರ್ಷಗಳ ನಂತರ ಭೇಟಿ ಗುರುತು ಸಿಗದಷ್ಟು ಬದಲಾಗಿದ್ದಳು. ಬೊಜ್ಜು ಬೆಳೆದು ದೇಹ ಊದಿಕೊಂಡಿತ್ತು ..ಢಾಳಾದ ಮೇಕಪ್ಪು ಅದ
ಮರೆಸುವ ಬದಲು ಮೆರೆಸಿತ್ತು. ಮಾತು ಶುರು ಮಾಡಿದ್ದು ಅವಳೆ....
" ಏನು ವಿಜಿ ಎಲ್ಲಾ ಠೀಕ ಅದನ ಗಂಡ,ಸಂಸಾರ, ಮಗಳು ಅಲ್ಲ ಹೆಂಗ ತಡ್ಕೊತಿ ನಿನ್ನ ಗಂಡ ವಾರಗಟ್ಲೆ ಇರೂದಿಲ್ಲ ಹಸಿವಿ ಅನಸೂದಿಲ್ಲೇನು?" ಅವಳ ಕಣ್ಣು
ಮಿನುಗುತ್ತಿದ್ದವು.
"ಹಂಗೇನಿಲ್ಲ ಈಗ ಮಗಳು ದೊಡ್ಡಾಕಿ ಆದ್ಲು ಮೊದಲಿನಂಗೂ ಈಗೂ ಹೆಂಗ್ ಇರಲಿಕ್ಕೆ ಆಗ್ತದ......"
"ಏನು ಮಹಾ ನಿಂಗ ವಯಸ್ಸಾಗ್ಯಾವ ..ಪ್ರದೀಪ ಎಲ್ಲರೇ ಊರಿಗೆ ಹೋಗಿದ್ದ ಅಂದ್ರ ನಾ ಬಹಳ ತ್ರಾಸ ತಗೊತೀನಿ...."ಅವಳು ನಿರ್ಭಿಡೆಯಾಗಿ ಮಾತನಾಡುತ್ತಿದ್ದಳು.
ನಿಧಾನವಾಗಿ ಅವಳಿಗೆ ಅಮಲು ಏರುತ್ತಿದೆ ಅನಿಸಿತು.
"ಮುಂದಿನ ಜೀವನದ ಬಗ್ಗೆ ಏನು ವಿಚಾರ ಮಾಡಿ...ಕಲ್ಪನಾ ಛಲೋನ ಮಾಡಿಕೊಂಡಿರಬೇಕು...."
" ಬಂಗಾರದಂಥ ಮಗಳಿದ್ದಾಳ ಸ್ವಂತ ಮನಿ ಅದ ಜಾಬ್ ಛಲೋ ನಡದದ...."ಯಾಕೋ ನನ್ನ ಧ್ವನಿ ಕಂಪಿಸುತ್ತಿದೆ ಅನಿಸಿತು.
" ಹುಂ ಎಲ್ಲ ಛಲೋ ಅನಿಸ್ತದ ಅಲ್ಲ ನಿನ್ನ ಪಗಾರದಾಗ ಮನಿ ಸಾಲದ ಕಂತು ತುಂಬತಿ , ಮಗಳ ಫೀಸು, ನಿಮ್ಮ ಅತ್ತಿ ಔಷಧಾ ಎಲ್ಲಾ ಮುಗದ ಮ್ಯಾಲ ಏನರೇ
ಉಳದ್ರ ಒಂದೆರಡು ಸೀರಿ ತಗೋತಿ ಕೆಲವೊಮ್ಮೆ ಗಂಡನ ಮುಂದ ಕೈ ಚಾಚತಿ ಅವಾ ಬೈದು ದುಡ್ಡು ಕೊಡತಾನ ಸುಮ್ಮನ ಅನಿಸ್ಕೊತಿ ಅಲ್ಲ..?"

ಅವಳು ಸಹಜವಾಗಿಯೇ ಕೇಳಿದ್ಲು ಆದ್ರ ಯಾಕೋ ಭರ್ಚಿ ಚುಚ್ಚಿದಂಗಾತು.ನನ್ನ ಸುಪ್ತ ಮನಸಿನಲ್ಲಿ ಈ ಭಾವನೆ ಇದ್ದಿರಬೇಕು ದೀಪಾ ಅದನ್ನು ಎಬ್ಬಿ ತೆಗೆಯುತ್ತಿದ್ದಾಳೆ...ಮನಸ್ಸಿಗೆ ಕಿರಿಕಿರಿಅನ್ನಿಸತೊಡಗಿತು. ನನ್ನ ಭಾವನೆಗಳಿಗೆ ಅವಳು ಕನ್ನಡಿ ಹಿಡಿಯುತ್ತಿದ್ದಾಳೆ ಅಂತ ಏಕೆ ಅನಿಸಬೇಕು..ನಾನು ಅಂದುಕೊಂಡಿದ್ದೆ ಈ ಸಂಸಾರ ತಾಪತ್ರಯದಾಗ ನಾ ಎಲ್ಲೊ ಕಳೆದು
ಹೋಗೇನಿ ಅಂತ...ಮುಂದಿನ ಜೀವನದ್ ಬಗ್ಗೆ ನೂರೆಂಟು ಕನಸು ಇಟ್ಟುಕೊಂಡು ನಾ ಹೊಸಿಲು ತುಳಿದಿದ್ದೆ.. ಎಲ್ಲಾ ಆಶಾ
ಪೂರೈಸ್ಯಾವ ಅಂತ ಹೇಳುವ ಹಾಗಿಲ್ಲ ಒಂದೊಂದ ಸಲ ಅನಸ್ತದ ನಾ ದುಡಿತಿರುವುದು ನನಗಾಗಿ ಅಲ್ಲ ಬೇರೆ ಯಾರದೋ
ಕನಸು ಪೂರೈಸಲು ನಾ ದುಡಿಯಬೇಕಾಗಿದೆ....ಈ ಬದುಕು ನನ್ನದಲ್ಲ ಬ್ಯಾರೆ ಯಾರದೋ ಬದುಕ ನಾ ಕಟ್ಟಿಕೊಡುತ್ತಿರುವೆ...
ಅತೃಪ್ತಿ ಸದಾ ಹಿಂದೆಯೇ ಇದೆ....

" ಸ್ವಲ್ಪ ವೈನ್ ತಗೋತಿ ಏನು..."ಅವಳ ಪ್ರಶ್ನೆ ಮೊದಲು ಅರ್ಥ ವಾಗಲಿಲ್ಲ.....ವಿಚಿತ್ರ ಧೈರ್ಯ ಬಂತು ಗೋಣು ಅಲ್ಲಾಡಿಸಿದೆ..
ಮೊದಲು ರುಚಿ ಗೊತ್ತಾಗಲಿಲ್ಲ ಕೋಕ್ ಬೇರೆ ಬೆರೆಸಿದ್ಲು...ಒಂಥರಾ ಒಗರು ವಾಸನೆ..ಹಿಂಗ ಅಂಥ ಹೇಳಲಾರದ ರುಚಿ....
"ನಿನ್ನ ಜೀವನ ಹೆಂಗ ಅದ ಮಗ ಬೋರ್ಡಿಂಗ್ ನ್ಯಾಗ ಇದ್ದಾನ ಅಂದಿ....ಭೇಟಿ ಅಪರೂಪ ಇರಬೇಕು...ನಿಮ್ಮ ಮನಿಯವರ
ಬಿಸಿನೆಸ್ ಹೆಂಗ್ ಅದ...." ಅವಳನ್ನು ಮಾತಿಗೆ ಎಳೆದೆ.... ಹೇಳುತ್ತಲೆ ಹೋದಳು ತನ್ನ ಮದಿವೆಯಬಗ್ಗೆ,. ದಾಂಪತ್ಯದ ಬಗ್ಗೆ,
ಎದುರಿಗಿದ್ದವಳು ಮುಜುಗರಗೊಂಡಾಳು ಎಂಬ ಕಾಳಜಿ ಅವಳಲ್ಲಿರಲಿಲ್ಲ. ನಿರ್ಭಿಡೆತನ ಅವಳಿಂದ ಇನ್ನೂ ದೂರಾದಹಾಗಿರಲಿಲ್ಲ. ಮಾತು ಸಹಜವಾಗಿ ಹೊಮ್ಮುತ್ತಿತ್ತು.....
" ನೋಡು ವಿಜಿ ನಾವು ಹೆಂಗಸರು ಪಾಪದವ್ರು..ಈ ಗಂಡಸ್ರಿಗೆ ನಾವೆಲ್ಲ ಬರೀ ಸಾಧನೆಯ ಸಾಮಾನುಗಳು..ಹೊಸದಾಗಿ ನಂಗೂ ಅನಿಸಿತ್ತು ಜಗತ್ತು ನನ್ನ ಕೈಯಾಗ ಅದ..ಆದ್ರ ಕೈಯಾಗ ಬರೇ ಉಸುಕಿತ್ತು ಮುಷ್ಟಿ ಬಿಚ್ಚಿದ್ರ ಏನೂ ಇಲ್ಲ....ಪ್ರದೀಪನೂ
ಎಲ್ಲಾರಂಗನ ಅಪ್ಪನ ವಶೀಲಿ ಬೇಕಾಗಿತ್ತು ಭರಪೂರ ಫಾಯದಾ ಮಾಡಿಕೊಂಡ ದಿನಾ ಹೋದಂಗ ನನ್ನ ದೇಹ ಅವಗ
ಬ್ಯಾಸರಿಕಿ ತಂತು...ಹೊರಗ ಹೆಜ್ಜಿ ಇಟ್ಟ...ನೇರವಾಗಿ ಹೇಳಿದ..ಡೈವೋರ್ಸ ದೊಡ್ಡ ವಿಷಯ ಅಲ್ಲ ಹೊರಗ ಹೋದ್ರ ಇನ್ನೊಬ್ಬ
ಪ್ರದೀಪ ಸಿಗೂದಿಲ್ಲ ಅಂತ ಯಾವ ಗ್ಯಾರಂಟಿ.. ನನಗೂ ಛಲ ಬಂತು ನಮ್ಮ ಅಪ್ಪನ ಪಾರ್ಟಿ ಮೀಟಿಂಗ್ ಹೊಂಟೆ...ಹೊಸಾ
ಜನ ಸಿಕ್ರು ಕೆಲವರ ವೇವ್ ಲೆಂಗ್ತ ಸರಿ ಹೊಂತು ಮುಂದುವರೆದೆ...ಪ್ರದೀಪ ನಿರುತ್ತರ ಆಗಿದ್ದ..ನಾ ಏನೋ ಸಾದಿಸಿದ ಹೆಮ್ಮೆಯಲ್ಲಿ ಬೀಗಿದೆ...ಮಗನ ಮುಂದೆ ಸರಿಅಲ್ಲ ಅಂತ ಅವನಿಗೆ ಬೋರ್ಡಿಂಗನ್ಯಾಗ ಬಿಟ್ಟೆ.........ಅತೃಪ್ತಿ ಮಾತ್ರ ಬೆನ್ನಿಗಂಟಿಕೊಂಡೇ ಅದ..."........
---------------೦-------------------------೦------------------------೦--------------------------

-----

ಮುಂಜಾನೆ ಎದ್ದಾಗ ತಲೆ ಜಡವಾಗಿತ್ತು...ಚಹಾದ ಬದಲು ಬಿಸಿನೀರಿನ ಪಾನಕ ಮಾಡಿಕೊಂಡು ಕುಡಿದೆ..
ಇವರು ಸ್ಕೂಟರ್ ಬಿಚ್ಚಿಕೊಂಡು ಕುಳಿತಿದ್ದರು.. ಅತ್ತೆ ಯವರ ಗೆಳತಿಯ ಮೊಮ್ಮಗನ ಮುಂಜಿವೆ ಇತ್ತು ಸುಜನಳನ್ನು ಜತೆಗೆ
ಕರೆದೊಯ್ಯುವವರಿದ್ದರು. ಅರಿವೆ ವಾಶಿಂಗ್ಗೆ ಹಾಕಿ ಹಾಲ್ ಗೆ ಬಂದೆ. ರಿಪೇರಿಮುಗಿಸಿದ ಇವರು ಪೇಪರ್ ತಿರುವಿ ಹಾಕುತ್ತಿದ್ದರು.
ಸುಜನ ಅಜ್ಜಿಯ ಜೊತೆ ಸಂಭ್ರಮದಿಂದ ಹೊರನಡೆದಳು.
"ನಿನ್ನೆ ನನ್ನೊಳಗ ಏನಾದರೂ ಫರಕು ಆತು ಅಂತ ನಿಮಗ ಅನಿಸಲಿಲ್ಲೇನು...." ಪ್ರಶ್ನೆಗೆ ಗಲಿಬಿಲಿ ಗೊಂಡರೂ
ಶಾಂತವಾಗಿ ಉತ್ತರಿಸಿದರು.
"ನಿನ್ನೆ ನಿನ್ನ ಹಳೆ ಗೆಳತಿ ಸಿಕ್ಲು ಅಂತ ಹೇಳಿದ್ಯಲ್ಲ ಗೆಳತ್ಯಾರು ಬಹಳ ದಿನಗಳಿಂದ ಸಿಕ್ಕಿರಿ ಏನೋ ವಿಷೇಶ
ಇರಬೇಕು ಅಂದ್ಕೊಂಡೆ...ಹೇಳು ಏನಾತು...."
ಹೇಳಲೋ ಬೇಡವೋ ಎಂಬ ಅನುಮಾನದ ಹಿಂದೆ ನುಗ್ಗಿ ಬಂದದ್ದು ಹುಚ್ಚು ಧೈರ್ಯ.ಎಲ್ಲ ಹೇಳಿದೆ ದೀಪಾ ಆಡಿದ ಮಾತಿನ ಬಗ್ಗೆ , ನನ್ನ ಜೀವನದ ಬಗೆಗಿನ ಅವಳ ಕಾಮೆಂಟಗಳು ಯಾವುದನ್ನೂ ಮುಚ್ಚಿಡದೇ ಹೇಳಿದೆ. ವೈನ್ ಸೇವಿಸಿದ್ದು
ಸಹ ಮುಚ್ಚಿಡಲಿಲ್ಲ. ನಿರ‍ಾಳ ವಾಯಿತು. ಗಲ್ಲಕ್ಕೆ ಕೈ ಆನಿಸಿ ಇವರು ಕೇಳಿಸಿಕೊಳ್ಳುತ್ತಿದ್ದರು. ಮೌನ ಹೆಪ್ಪುಗಟ್ಟಿತ್ತು.ಇವರು ಒಂದು ವೇಳೆ ಸಿಟ್ಟಿಗೆದ್ದು ಕೂಗಾಡಿದರೆ ನಾನೂ ಸುಮ್ಮನಿರಬಾರದು ..ಅತೃಪ್ತಿ ಇದೆ ನಾ ಜೀವಿಸುತ್ತಿರುವ ಈ ಜೀವನದ ಬಗ್ಗೆ ದುಡಿಯುವ
ಯಂತ್ರ ವಾಗಿ ಮಾರ್ಪಡುತ್ತಿರುವೆ...ನನ್ನ ಅಸ್ತಿತ್ವ ಏನು ನೂರೆಂಟು ವಿಚಾರಗಳು... ಜಿಗುಪ್ಸೆ ಬರುತ್ತಿದೆ ನನ್ನ ಮೇಲೆಯೆ ನನಗೆ..
"ನೋಡು ವಿಜಿ ನಿನ್ನೆ ನೀ ವೈನ ಕುಡಿದಿ ಅದು ನನಗ ಮುಖ್ಯ ಅನಿಸೂದಿಲ್ಲ . ನಾನೂ ಇದರ ಬಗ್ಗೆ ವಿಚಾರ ಮಾಡತೇನಿ ಯಾವಾಗರ ನಮ್ಮದು ಒಂದು ಸಂಸಾರೇನು ನಿನಗ ಗೊತ್ತದ ನನ್ನ ಅಪ್ಪ ಯಾವ ಆಸ್ತಿನೂ ಮಾಡಿ ಹೋಗಿರಲಿಲ್ಲ.. ತಂಗಿ
ಮದವಿ ಜವಾಬ್ಡಾರಿ ಈ ಮನಿ ಸಾಲ ಸುಜನಳ ಭವಿಷ್ಯ ಎಲ್ಲಾ ಎದುರಿಗೆ ಕುಣಿತಾವ. ನಾ ಅಸಹಾಯಕನಿದ್ದೇನಿ ನಿನ್ನ ಪಗಾರದಿಂದ ಸಾಲದ ಕಂತು,ಮನಿ ಖರ್ಚು ನಡೀತದ. ನನ್ನ ಪಗಾರ ಮಗಳ ಮುಂದಿನ ಭವಿಷ್ಯಕ್ಕ ಉಪಯೋಗ ಆಗ್ತದ
ನಾವು ಈಗ ಸ್ವಲ್ಪ ತ್ಯಾಗ ಮಾಡಲೆ ಬೇಕಾಗೇದ....."
ಇವರು ಹೇಳುತ್ತಲೇ ಇದ್ದರು.ಮಾತು ಸಹಜವಾಗಿರಲಿಲ್ಲ ಮಠದಲ್ಲಿ ಸ್ವಾಮಿಗಳು ಉಪದೇಶ ಕೊಡುವಹಾಗಿತ್ತು. ಅವರಲ್ಲೂ
ತಳಮಳ ಇದೆ ಬದುಕುತ್ತಿರುವ ರೀತಿಯ ಬಗ್ಗೆ ಅಸಹನೆ ಇದೆ ಆದರೆ ಬಾಯಿಂದ ಮಾತ್ರ ಉಪದೇಶ ಬರುತ್ತಿದೆ... ದೀಪಾಳ
ಮಾತು ಮತ್ತೆ ನೆನಪಗುತ್ತಿದೆ ನಿಜಕ್ಕೂ ನಾ ಒಂದು ವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡಿರುವೆ.. ಯಾಕೋ ಇದರಿಂದ ಬಿಡುಗಡೆ ಇಲ್ಲ
ಎಂಬ ನಂಬಿಕೆ ಬಲವಾಗತೊಡಗಿದೆ...

------------೦-----------------೦-----------------------೦----------------------
ರಾತ್ರಿ ಸುಜನ ಪಕ್ಕಕ್ಕೆ ಮಲಗಿದ್ದಳು ಇವರು ಸಾಯಂಕಾಲವೇ ಚಿಕ್ಕೋಡಿ ಬಸ್ ಹತ್ತಿದ್ದರು.ಕೈಯಲ್ಲಿ ಪುಸ್ತಕ
ಇತ್ತಾದರೂ ಮನಸ್ಸು ಎಲ್ಲೋ ಓಡುತ್ತಿತ್ತು..ನನ್ನ ಬದುಕು ನನ್ನದಾಗುವುದು ಯಾವಾಗ ಈ ದಿಗಿಲು ಕಾಡುತ್ತಿತ್ತು. ಬೇರೆಯವರೇನಲ್ಲ ಆದರೂ ನಾ ಕೇವಲ ಸಂಬಳ ಎಣಿಸುವವಳೆ ಹಾಗಾದರೆ...ಇನ್ನೊಬ್ಬರ ಸಲುವಾಗಿ ದುಡಿಯುವುದೇ ಆಯಿತೆ
ಈ ಬಾಳು... ದೀಪಾಳ ಹಾಗೆ ನಾ ಎಂದೂ ಬಿಂದಾಸ್ ಆಗಿ ಇರಲಾರೆನೆ . ಅಥವಾ ನಿನ್ನೆ ಅವಳು ನನಗೆ ಭೇಟಿ ಆಗದೆ ಇದ್ರೆ
ನಾ ಹೀಗೆಲ್ಲ ವಿಚಾರ ಮಾಡುತ್ತಲೆ ಇರಲಿಲ್ಲವೇನೋ....ವಿಚಾರ ಮಾಡಿದಂತೆಲ್ಲ ಈ ಅನಿಸಿಕೆ ಬಲವಾಯಿತು.. ಆದರೆ ನಾ
ವೈನ್ ಏಕೆ ಕುಡಿದೆ ಎಲ್ಲೋ ಮನಸಿನಲ್ಲಿ ನಾ ದೀಪಾಳ ಮುಂದೆ ಸೋಲಬಾರದು ಗೌಣವಾಗಬಾರದು ಈ ಅನಿಸಿಕೆ ಹಾಗೆ
ಪ್ರೇರೆಪಿಸಿತೋ ಗೊತ್ತಿಲ್ಲ ಅಥವಾ ಯಾರೋ ಬಂದು ಕೈ ತೋರಿಸಿ ನನ್ನ ಒಳಗನ್ನು ಈ ರೀತಿ ಬೆತ್ತಲು ಮಾಡಿದ್ದಕ್ಕೆ ಹತಾಶೆಯ
ಪ್ರತಿಕ್ರಿಯೆಯೋ ಗೊತ್ತಿಲ್ಲ....

ಬೆಳಿಗ್ಗೆ ಎದ್ದಾಗ ತಲೆ ಭಾರ ಆಗಿತ್ತು. ಬ್ಯಾಂಕಿಗೆ ರಜ ಹೇಳಿದವಳು ಮತ್ತೆ ರೂಮ್ ಸೇರಿ ಮಲಗಿದೆ.. ತಲೆ
ನೋವಿನಿಂದ ಸಿಡಿಯುತ್ತಿತ್ತು....ಎಷ್ಟು ಹೊತ್ತು ಮಲಗಿದ್ದೇನೋ ಗೊತ್ತಿಲ್ಲ ಮೊಬೈಲ್ ಕರೆದಾಗ ಅತ್ತಲಿಂದ ತೇಲಿಬಂದ
ಇವರ ದನಿಯಲ್ಲಿ ಉತ್ಸಾಹ ಇತ್ತು..ತಮಗೆ ಪ್ರಮೋಶನ್ ಸಿಕ್ಕಿದ್ದರ ಬಗ್ಗೆ ಹೇಳುತ್ತಿದ್ದರು.. ನಾನೂ ಉತ್ಸಾಹ ತೋರಿಸುವ
ಪ್ರಯತ್ನ ಮಾಡಿದೆ..ಗೋಡೆಯ ಕೆಲೆಂಡರ್ ರವಿವಾರ ಬರಲು ಐದು ದಿನ ಇದೆ ಎಂದು ಅಣಕಿಸುತ್ತಿತ್ತು....